ಮಲಪ್ರಭಾ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಬೈಲಹೊಂಗಲ ತಾಲೂಕು ಸೇರಿದಂತೆ ಇನ್ನಿತರ ತಾಲೂಕುಗಳ ಭೂಸ್ವಾಧೀನವಾಗದ ರೈತರ ಜಮೀನುಗಳನ್ನು ಕರ್ನಾಟಕ ನೀರಾವರಿ ನಿಗಮದ ಹೆಸರಿನಲ್ಲಿ ನಮೂದು ಮಾಡಿರುವ ಕುರಿತು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಆಕ್ಷೇಪ ವ್ಯಕ್ತಪಡಿಸಿದರು.
: ಪ್ರಶ್ನೋತ್ತರ ಕಲಾಪದಲ್ಲಿ ಭಾಗಿಯಾಗಿ ಈ ಬಗ್ಗೆ ಪ್ರಸ್ತಾಪ ಮಾಡಿದ ಶಾಸಕ ಮಹಾಂತೇಶ ಕೌಜಲಗಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಸವದತ್ತಿ, ರಾಮದುರ್ಗ, ಕಿತ್ತೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹಲವಾರು ರೈತರ ಗೇಣಿ ಮತ್ತು ಪಹಣಿ ಪತ್ರಗಳಲ್ಲಿ ಭೂ ಮಾಲೀಕರ ಹೆಸರಿನ ಬದಲಾಗಿ ಕರ್ನಾಟಕ ನೀರಾವರಿ ನಿಗಮ ಎಂದು ನಮೂದಾಗಿದೆ. ಇದರಿಂದ ರೈತರು ಕಂಗಾಲಾಗುವಂತೆ ಆಗಿದೆ. ಬೈಲಹೊಂಗಲ, ಸವದತ್ತಿ, ರಾಮದುರ್ಗ, ಕಿತ್ತೂರು ತಾಲೂಕಿನ ವ್ಯಾಪ್ತಿಯಲ್ಲಿ ಮಲಪ್ರಭಾ ನೀರಾವರಿ ಯೋಜನೆ ಇದ್ದು, ನೀರಾವರಿ ಇಲಾಖೆಗೆ ಸ್ವಾದೀನಪಡಿಸಿಕೊಂಡ ಜಮೀನು ಅಷ್ಟೇ ಅಲ್ಲದೇ ಕೆಲವೊಂದು ತಾಂತ್ರಿಕ ದೋಷದಿಂದ ಸ್ವಾದೀನಕ್ಕೆ ಒಳಗಾಗದ ಜಮೀನುಗಳ ರೈತರ ಗೇಣಿ ಮತ್ತು ಪಹಣಿ ಪತ್ರಗಳಲ್ಲಿ ಇತ್ತಿಚಿಗೆ ಕರ್ನಾಟಕ ನೀರಾವರಿ ನಿಗಮ ಎಂದು ತಪ್ಪಾಗಿ ನಮೂದಾಗಿದೆ. ಆದ್ದರಿಂದ ಇದೊಂದು ರೈತರ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಕೂಡಲೇ ಕ್ರಮ ಕೈಗೊಂಡು ರೈತರ ಗೇಣಿ ಮತ್ತು ಪಹಣಿ ಪತ್ರಗಳಲ್ಲಿ ಭೂಮಾಲೀಕರ ಹೆಸರು ಬರುವಂತೆ ಮಾಡಬೇಕು. ಸುಮಾರು 8ರಿಂದ 10 ಸಾವಿರ ರೈತರಿಗೆ ಸಮಸ್ಯೆಯಾಗಿದೆ ಎಂದರು.
ಇದಕ್ಕೆ ಉತ್ತರಿಸಿದ ಸಚಿವ ಗೋವಿಂದ ಕಾರಜೋಳ ನೀರಾವರಿ ಇಲಾಖೆ ಪ್ರಾರಂಭದಿಂದಲೂ 3 ಲಕ್ಷ 26 ಸಾವಿರ ಎಕರೆ ಸ್ವಾದೀನವಾಗಿದೆ. ರೈತರಿಗೆ ಪರಿಹಾರ ಕೊಟ್ಟ ಮೇಲೆ ನೀರಾವರಿ ಇಲಾಖೆ ಎಂದು ಹೆಸರು ಆಗಬೇಕಿತ್ತು. ಸುಮಾರು 25 ಸಾವಿರ ಎಕರೆ ಹೊರತು ಪಡಿಸಿ 3 ಲಕ್ಷ ಎಕರೆ ಭೂಮಿ ಹೆಸರು ರೈತರ ಹೆಸರಿನಲ್ಲಿಯೇ ಉಳಿದು ಬಿಟ್ಟಿತ್ತು. ಈಗ ಇದನ್ನು ತಿದ್ದುಪಡಿ ಮಾಡಿ ಕರ್ನಾಟಕ ನೀರಾವರಿ ನಿಗಮ ಎಂದು ಮಾಡಿದ್ದೇವೆ. ಅವರ ಹೆಸರಿನಲ್ಲಿ ಇದ್ದಿದ್ದರಿಂದ ಕೆಲವರು ಮಾರಾಟ ಮಾಡಿದ್ದಾರೆ, ಕೆಲವರು ಸಾಲ ತೆಗೆದುಕೊಂಡಿದ್ದಾರೆ, ಕೆಲವರು ಭಾಗ ಮಾಡಿಕೊಂಡಿದ್ದಾರೆ. ಈ ಎಲ್ಲಾ 3 ಲಕ್ಷ 26 ಸಾವಿರ ಎಕರೆ ಭೂಮಿಯನ್ನು ಕರ್ನಾಟಕ ನೀರಾವರಿ ನಿಗಮದ ಹೆಸರಿಗೆ ಮಾಡಿಕೊಂಡಿದ್ದೇವೆ ಎಂದರು. ತಾಂತ್ರಿಕ ದೋಷ ಏನಾಗಿದ್ದರೂ ಅದನ್ನು ಸರಿಪಡಿಸಲು ಈಗಾಗಲೇ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದರು. ಬಳಿಕ ಮಾತನಾಡಿದ ಮಹಾಂತೇಶ ಕೌಜಲಗಿ ಪರಿಹಾರ ಕೊಟ್ಟಿದ್ದ ಭೂಮಿಯನ್ನು ನೀವು ಕರ್ನಾಟಕ ನೀರಾವರಿ ನಿಗಮದ ಹೆಸರಿಗೆ ಮಾಡಿಕೊಳ್ಳಲು ನಮ್ಮ ಯಾವುದೇ ಅಭ್ಯಂತರ ಇಲ್ಲ. ಯಾರು ದುಡ್ಡು ತೆಗೆದುಕೊಂಡಿಲ್ಲ ಅಂತಹ ರೈತರ ಜಮೀನುಗಳನ್ನು ಅವರ ಹೆಸರಿಗೆ ಮಾಡಿಕೊಡುವಂತೆ ಆಗ್ರಹಿಸಿದರು.
ಒಟ್ಟಿನಲ್ಲಿ ಮಲಪ್ರಭಾ ನೀರಾವರಿ ಯೋಜನೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ರೈತರು ತಮ್ಮ ಜಮೀನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ತಕ್ಷಣವೇ ಸರ್ಕಾರ ಎಚ್ಚೆತ್ತುಕೊಂಡು ಈ ಸಮಸ್ಯೆ ಪರಿಹರಿಸಬೇಕಿದೆ. ಇಲ್ಲದಿದ್ರೆ ಈ ಭಾಗದ ರೈತರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ರೊಚ್ಚಿಗೇಳುವುದರಲ್ಲಿ ಅನುಮಾನವೇ ಇಲ್ಲ.


Recent Comments